ಇಂದು ಬೆಳಿಗ್ಯೆ ಮೈಸೂರಲ್ಲಿರುವ ನನ್ನ ತಂಗಿ ರೇವತಿಗೆ ಫೋನು ಮಾಡಿದಾಗ ತಿಳಿಯಿತು ಇನ್ನೊಂದು ವರ್ಷದಲ್ಲಿ ನಾವೆಲ್ಲ ನೀರಲ್ಲಿ ತೇಲುತ್ತೇವೆ ಎಂದು. ಹಾಗೆ ನೋಡಿದರೆ, ಅದು ನಮ್ಮ ಅಮೇರಿಕಾದಿಂದಲ್ಲೇ ಹುಟ್ಟಿ ಭಾರತಕ್ಕೆ ಔಟ್ ಸೋರ್ಸ್ ಮಾಡಿದ ನ್ಯೂಸ್! ಆದರೆ ಅದಕ್ಕೆ ನಮ್ಮ ಭಾರತದಲ್ಲಿ ಹೆಚ್ಚಿನ ನೆಲೆ ಹಾಗೂ ಬೆಲೆ ಸಿಕ್ಕಿದ ಹಾಗೆ ಕಾಣುತ್ತದೆ. ಹ್ಯಾಗೆಂದರೂ ಎದ್ರೆ ಬಿದ್ರೆ ಕೈಗೆ ಕಾಲಿಗೆ ಸಿಕ್ಕಿ ಹಾಕುವ ಸಾವಿರಾರು ಸ್ವಾಮಿಗಳ ನಾಡದು. ಬೀದಿ ನಾಯಿಗಳೆಷ್ಟಿವೆಯೋ ಅದರ ಹತ್ತು ಪಾಲು ಸ್ವಾಮಿಗಳಿದ್ದಾರೆ. ಬೇರೆಯವರ ಸಹಾಯವಿಲ್ಲದೇ ಸ್ವತಃ ಕಥೆ ಕಟ್ಟುವ ಈ ಸ್ವಾಮಿಗಳಿಗೆ ಇದರಿಂದ ಇನ್ನೂ ಆಹಾರ ಸಿಕ್ಕಿದಂತಾಗಿರ ಬೇಕು.
ಕೇಳಿದೆ, "ಹೇಗೆ ಹೇಳುತ್ತಿ ಭೂಮಿ ಮುಳುಗುವುದು ಆ ತಾರೀಖಿಗೇ?"
"ಈಗಲೇ ಸಮುದ್ರ ಉಬ್ಬರಿಸಲು ಶುರುವಾಗಿದೆಯೆಂದು ಎಲ್ಲಾ ಕಡೆ ಹೇಳ್ತಾರಲ್ಲಾ"
"ಅದು ಭೂಮಿಯ ಉಷ್ಣತೆ ಹೆಚ್ಚಿದ್ದರಿಂದ. ವಾತಾವರಣ ಮಲಿನತೆಯಿಂದ. ಓಜ಼ೋನ್ ಲೇಯರ್ಗೆ ತೂತಾಗಿದ್ದರಿಂದ. ಇಂಡಿಯಾದಲ್ಲಿ ಕಾರುಗಳು ಜಾಸ್ತಿಯಾಗಿದ್ದರಿಂದ. ಆರ್ಕಿಟಿಕ್ ಹಿಮ ಕರಗಿದ್ದರಿಂದ.."
"ಏನೇ ಹೇಳು. ನೀನು ನಂಬದಿದ್ದರೆ ಬಿಡು. ಎಲ್ಲಾ ಕಡೆ ಸುನಾಮಿ ಹಾಗೂ ಭೂಕಂಪ ಶುರುವಾಗಿದೆ. ಲಂಚ ಅಂತೂ ಹೇಸಿಗೆ ಆಗುವಷ್ಟು ತುಂಬಿದೆ ಇಲ್ಲಿ. ಲೋಕ ಭರ್ತಿ ರಿಸೆಶನ್. ಎಲ್ಲಾ ಕಡೆ ಕಾಲ ಕೆಟ್ಟು ಹೋಗಿದೆ..."
ರೇವತಿ ನನಗಿಂತ ವಯಸ್ಸಿನಲ್ಲಿ ಚಿಕ್ಕವಳು. ಆದರೆ ಟೊಳ್ಳು ನಂಬಿಕೆ ಮಾತ್ರ ನಮ್ಮ ಅಮ್ಮ, ಅಜ್ಜಿಯರಿಗೂ ಇದ್ದಿರದಷ್ಟು! ಅಷ್ಟರಲ್ಲಿ ಅವಳ ಮಗಳು ಅನು ಬಂದಳು ನನ್ನ ನೆರವಿಗೆ.
"ಇವ್ಳೊಬ್ಳು! ಬಿಡಮ್ಮ. ಲೋಕದಲ್ಲಿ ಬದಲಾಗುತ್ತ ಇರುತ್ತೆ ವಾತವರಣ. ಮೊದಲು ಐಸ್ ಏಜ್ ಇತ್ತು. ಆಗ ಈ ಸ್ವಾಮಿಗಳೆಲ್ಲಾ ಇರ್ಲ್ಲಿಲ್ಲಾ ಲೋಕ ಉರಿದು ಹೋಗುತ್ತೆ ಅಂತಾ ಹೇಳ್ಲಿಕ್ಕೆ. ಯಾರೋ ಕ್ಯಾಲೆಂಡರು ಬರೆಯುವವ ೨೧ ದಶಂಬರ ೨೦೧೨ ವರೆಗೆ ಬರೆದ ಕೂಡಲೇ ಸತ್ತು ಹೋಗಿರ್ ಬೇಕು. ಅದಕ್ಕೇ ಅದರ ನಂತ್ರದ ಕ್ಯಾಲೆಂಡರು ಬರ್ದಿಲ್ಲ.
ದೊಡ್ಡಮ್ಮ, ಇಲ್ಲಿ ಈಗ ಟಿವಿಯಲ್ಲೆಲ್ಲಾ ಇಂತದ್ದೇ ಮಾತಾಡುವ ಸ್ವಾಮಿಗಳು. ಈ ಥರಾನೆ ಹೆದರ್ಸುತ್ತಾ ಇರ್ತಾರೆ. ಎಲ್ಲಾ ಅವ್ರಿಗೊಬ್ರಿಗೇ ಮಾತ್ರ ಗೊತ್ತಿರ್ವ ಹಾಗೆ. ಒಂದು ಟಿವಿ ಚ್ಯಾನೆಲ್ ಅಂತೂ ಅಂತಾದ್ದೇ ಸೆನ್ಸೇಶನಲ್ ನ್ಯೂಸ್ ಹೇಳ್ತಾ ಇರುತ್ತೆ....ನಮ್ಮ ದೇಶ ಡಿಕೇಡ್ಸ್ ಹಿಂದೆ ಹೋಗಿದೆ..."
ಎಡೆ ಬಿಡದೆ ಬುಲ್ಲೆಟ್ ಟ್ರೈನ್ ತರಹಾ ಮುಂದುವರಿಯುತ್ತಿರುವ ಭಾರತದಲ್ಲಿ ಸಾಫ಼್ಟ್ ವೇರ್ ಇಂಜಿನಿಯರಿಂಗ್ ಎಷ್ಟು ಮುಂದುವರಿದಿದೆಯೋ, ಅಷ್ಟೇ ಪ್ರಮಾಣದಲ್ಲಿ ಲಂಚ ಹಾಗೂ ಪೊಳ್ಳು ನಂಬಿಕೆಗಳೂ ಮುಂದುವರಿದ ಹಾಗೆ ಕಾಣುತ್ತೆ. ಸಾಫ಼್ಟ್ ವೇರ್ ಇಂಜಿನಿಯರಿಗಳಿಗಿಂತಲೂ ಹೆಚ್ಚಿನ ಸಂಪಾದನೆ ಈ ಸ್ವಾಮಿಗಳು ಮಾಡುವ ಹಾಗೆ ಅನ್ನಿಸುತ್ತದೆ ಇತ್ತೀಚಿಗೆನೆ ಒಂದು ನ್ಯೂಸ್ ಓದಿದಾಗ. ಆ ಸ್ವಾಮಿ ಬಾಬ ರಾಮ್ ದೇವ್. ಕೋಟಿ ಗಟ್ಟಲೆ ಸಂಪಾದನೆ ಇರುವುದಲ್ಲದೇ, ಸ್ಕೋಟ್ ಲೇಂಡಿನ ದ್ವೀಪವೇ ಅವನದಾಗಿದೆಯಂತೆ! ಅಮೇರಿಕಾದಲ್ಲಿ ಹೇಳುವಂತೆ, ’Thanks to the stupidity of the people!'
ಇನ್ನು ಭೂಮಿ ಮುಳುಗುವ ವಿಚಾರಕ್ಕೆ ಬರೋಣ. ಹಲವಾರು ಪ್ರಶ್ನೆಗಳು ಟಣ್ಣಣೆ ಜಿಗಿದು ಬರುತ್ತದೆ ನನ್ನ ಕೂದಲುದುರಿದ ತಲೆಯೊಳಗೆ. ನೀರಿರಿವುದು ಭೂಮಿ ಮೇಲೆ. ಭೂಮಿ ನೀರಲ್ಲಿಲ್ಲ. ಆದ್ದರಿಂದ ಭೂಮಿ ಹ್ಯಾಗೆ ನೀರಲ್ಲಿ ಮುಳುಗಲು ಸಾಧ್ಯ? ಅದು ಹ್ಯಾಗೆ ಅದೇ ದಿನ ಆಗ ಬೇಕು? ಒಂದು ವೇಳೆ ಅದು ಅವರ ಮಿಸ್ ಕ್ಯಾಲುಕಲೇಶನ್ನಿಂದ ಭೂಮಿ ಮೇಲೆ ನೀರು ತುಂಬುವುದು ಅಂತಾ ಇಟ್ಟು ಕೊಳ್ಳೊಣ. ಅದು ಸುನಾಮಿಯೇ ಅಂತಾ ಇಟ್ಟು ಕೊಳ್ಳೋಣ. ಅಂದ್ರೆ, ಆ ದಿನ, ೧೨ ಗಂಟೆಗೆ (ಯಾವ ಗಂಟೆ? ಮೊನ್ನೆ ಐನ್ ಸ್ಟೀನ್ ತಿಯರಿಯ ತಲೆಗೆಳಗೆ ಮಾಡಿದ ಸೆರ್ನ್ ಗಡಿಯಾರವೇ? ಆದರೆ ಇಂಡಿಯಾದಲ್ಲಿ ೧೨ ಗಂಟೆ ಮಧ್ಯಾಹ್ನ ಆದರೆ, ಅಮೇರಿಕಾದಲ್ಲಿ ಆಗ ೨೪ ಗಂಟೆ ಮೊದಲ ದಿನ! ಅಲ್ಲಿ ಸ್ವಲ್ಪ ಕನ್ಫ಼್ಯೂಶನ್ ಇದೆ! ) ಹಿಂದೂ ಮಹಾ ಸಾಗರ, ಅರೆಬಿ ಸಮುದ್ರ, ಪೆಸಿಫ಼ಿಕ್ ಸಾಗರ, ಅಟ್ಲಾಂಟಿಕ್ ಸಾಗರ...ಇತ್ಯಾದಿ, ಇತ್ಯಾದಿ, ಸಾಗರ, ಸಮುದ್ರ, ನದಿ, ಕೆರೆ, ಬಾವಿ, ತೋಡು, ಚರಂಡಿ ಎಲ್ಲಾ ...ಒಮ್ಮೆಲೇ ಸಿಡಿದು ಬುರ್ರನೆ ಜಿಗಿದು ಭೂಮಿಯ ಮೇಲೆ ಪ್ರವಾಹ ಎಸಗಿ....ಎಲ್ಲಾ ಹುಳು ಹುಪ್ಪಟ್ಟೆಗಳೂ ಮುಳುಗಿ, ಬ್ಯಾಕ್ಟೀರಿಯ, ವೈರಸುಗಳೂ ಕೊಚ್ಚಿ ಹೋಗಿ, ..., ಹೀಗೆ ಭವಿಷ್ಯ ಹೇಳುವ ಈ ಸ್ವಾಮಿಗಳೆಲ್ಲಾ ಮೊದಲಿನ ಸುತ್ತಲ್ಲೇ ನಾಶವಾಗಿ, .......
ಇಡೀ ಭೂಮಿ ಮುಳುಗುವ ಬಗ್ಯೆ ಹೇಳುವ ತಾಕತ್ತಿರುವ ಈ ಜನಗಳು/ಸ್ವಾಮಿಗಳಿಗೆ ಆವತ್ತು ಇಂಡೋನೇಷಿಯದ ಹಾಗೂ ಜಪಾನಿನ ಭೂಕಂಪ ಮತ್ತು ಸುನಾಮಿಯ ಬಗ್ಯೆ ಯಾಕೆ ಮುನ್ನೋಟ ಸಿಗಲಿಲ್ಲ? ಎಷ್ಟೊ ಲಕ್ಷ ಗಟ್ಟೆಲೆ ಜನರನ್ನ ಉಳಿಸ ಬಹುದಿತ್ತಲ್ಲಾ! ಇಂತಹ ಬೋಗಸ್ ಸ್ವಾಮಿಗಳನ್ನು ಹೇಳಿ ಪ್ರಯೋಜನವಿಲ್ಲಾ. ಅಂತಹ ಕಂತ್ರಿಗಳು ಅಕ್ಷಯ ಪಾತ್ರೆಯಂತೆ ಒದಗುತ್ತಾರೆ ಅವರನ್ನು ನಂಬಲು ಜನರಿರುವ ವರೆಗೆ!
ತಲೆಯೊಳಗಿನ ಹುರುಳ ಉಪಯೋಗಿಸದಿರೆ ಬುದ್ಧಿ ಮಾಂದ್ಯದ ಪ್ರಳಯದಲಿ ಮುಳುಗಿಹೋಗುವೆ, ಸರ್ವಜ್ನ!
Saturday, September 24, 2011
Subscribe to:
Posts (Atom)
